Close

ಪಶುಸಂಗೋಪನೆ

ಭಾರತ ದೇಶದ ಗ್ರಾಮೀಣ ಭಾಗಗಳಲ್ಲಿ ವ್ಯವಸಾಯವು ಮುಖ್ಯವಾಗಿ ಪಶು ಸಂಪತ್ತನ್ನು ಅವಲಂಭಿಸಿರುವುದರಿಂದ ರಾಷ್ಟ್ರದ ಮತ್ತು ರಾಜ್ಯಗಳ ಗ್ರಾಮೀಣ ಆರ್ಥಿಕ ಅಭಿವೃದ್ದಿಗೆ ಪಶು ಸಂಪತ್ತಿನ ಪಾತ್ರ ಬಹಳ ಮಹತ್ವದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಶು ಸಂಪತ್ತು ಅಪಾರವಾಗಿದ್ದು, ಪಶು ಸಂಗೋಪನೆಯಲ್ಲಿ ಮುಂಚೂಣೆಯಲ್ಲಿದೆ. ಸಾಮಾನ್ಯವಾಗಿ ಈ ಜಿಲ್ಲೆಯ ಗ್ರಾಮೀಣ ಜನತೆ ತಮ್ಮ ಜೀವನೋಪಾಯಕ್ಕಾಗಿ ವ್ಯವಸಾಯ ಮತ್ತು ಪಶುಪಾಲನೆಯನ್ನು ಅವಲಂಬಿಸಿರುತ್ತಾರೆ. ಗ್ರಾಮೀಣ ಆರ್ಥಿಕಾಭಿವೃದ್ಧಿಯಲ್ಲಿ ಜಾನುವಾರುಗಳು ಅತೀ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವುದರಿಂದ ಈ ಜಾನುವಾರು ಸಂಪತ್ತಿಗೆ ಆರೋಗ್ಯ ರಕ್ಷಣೆ ನೀಡುವ ಕಾರ್ಯವನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಹೊತ್ತಿದ್ದು, ಈ ಕಾರ್ಯವನ್ನು ಇಲಾಖೆಯು ವಿವಿಧ ಸ್ಥರದ ಪಶುವೈದ್ಯ ಸಂಸ್ಥೆಗಳ ಜಾಲದ ಮೂಲಕ ಯಶಸ್ವಿಯಾಗಿ ನಿರ್ವ ಹಿಸಲಾಗುತ್ತಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 1945 ರಲ್ಲಿಯೇ ಕೃಷಿ ಇಲಾಖೆಯಿಂದ ಪ್ರತ್ಯೇಕಗೊಂಡು ಸ್ವತಂತ್ರ ಇಲಾಖೆಯಾಗಿ ರೂಪಗೊಂಡಿದ್ದಲ್ಲದೇ ಆರಂಭಗೊಂಡ ದಿನಗಳಲ್ಲಿ ಇಲಾಖೆಯ ಚಟುವಟಿಕೆಗಳು ಕೇವಲ ಜಾನುವಾರುಗಳಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುವುದಕ್ಕೆ ಮಾತ್ರ ಸೀಮಿತಗೊಂಡಿತ್ತಾದರೂ ಇಂದು ಇಲಾಖೆಯ ರೈತರಿಗೆ ಹೈನುಗಾರಿಕೆಯ ಬಗ್ಗೆ, ಜಾನುವಾರು ತಳಿ ಸಂವರ್ಧನೆ ಬಗ್ಗೆ, ಮತ್ತು ಕುಕ್ಕುಟ ಅಭಿವೃದ್ಧಿಯ ಬಗ್ಗೆ ಆಧುನಿಕ ತಾಂತ್ರಿಕತೆಯ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಇಲಾಖೆಯ ಅತೀ ಮುಖ್ಯವಾದ ಜಾನುವಾರು ಸಂಪತ್ತಿನ ಆರೋಗ್ಯ ರಕ್ಷಣೆಯ ಕಾರ್ಯದೊಂದಿಗೆ ದನ, ಎಮ್ಮೆ, ಕುರಿ, ಮತ್ತು ಉಣ್ಣೆ, ಮೇಕೆ, ವರಾಹ, ಕುಕ್ಕುಟ, ಬಾತುಕೋಳಿ, ಮೊಲ, ಮೇವು ಇತ್ಯಾದಿಗಳ ಅಭಿವೃದ್ದಿ ಚಟುವಟಿಕೆಗಳು, ವಿಸ್ತರಣಾ ಸೇವೆಗಳು ಮತ್ತು ತರಬೇತಿ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಎಲ್ಲಾ ಚಟುವಟಿಕೆಗಳ ಅಂತಿಮ ಗುರಿ ಜಾನುವಾರು ಉತ್ಪಾದನೆಗಳಾದ ಹಾಲು, ಮಾಂಸ ಉಣ್ಣೆ, ಮತ್ತು ಕುಕ್ಕುಟ ಉತ್ಪನ್ನಗಳಾದ ಮೊಟ್ಟೆ ಮತ್ತು ಕೋಳಿ ಮಾಂಸ ಅಧಿಕವಾಗಿ ಲಭ್ಯಗೊಳಿಸುವ ಮೂಲಕ ಜನಜೀವನ ಮಟ್ಟವನ್ನು ಸುಧಾರಿಸುವುದರೊಂದಿಗೆ ದೇಶದ ಸಂಪತ್ತನ್ನು ಹೆಚ್ಚಿಸುವುದಾಗಿದೆ. .

ಇಲಾಖಾ ಚಟುವಟಿಕೆಗಳು

  1. ಜಿಲ್ಲೆಯಲ್ಲಿರುವ ಜಾನುವಾರು ಪ್ರಾಣಿಗಳ ಮತ್ತು ಕುಕ್ಕುಟ ಸಂಪತ್ತಿನ ಆರೋಗ್ಯ ರಕ್ಷಣೆ ಹಾಗೂ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ.
  2. ವೈಜ್ಞಾನಿಕ ತಳಿ ಸಂವರ್ದನೆ , ಮೇವು ಉತ್ಪಾದನೆ ಹಾಗೂ ನಿರ್ವಹಣಾ ಕಾರ್ಯಗಳ ಮೂಲಕ ಜಾನುವಾರುಗಳ ಮತ್ತು ಕುಕ್ಕುಟಗಳ ಉತ್ಪತ್ತಿಯನ್ನು ಸುಧಾರಿಸುವುದು.
  3. ಸುಧಾರಿತ/ ಆಧುನಿಕ ಪಶುಸಂಗೊಪನೆ ಪದ್ದತಿಗಳ ಬಗ್ಗೆ ರೈತರಿಗೆ ತರಭೇತಿ, ತಿಳುವಳಿಕೆ ನೀಡುವುದು ಮತ್ತು ಅದರ ಪ್ರಚಾರಕ್ಕಾಗಿ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳುವುದು.
  4. ವಿವಿಧ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳಾದ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಠ ಪಂಗಡ ಉಪಯೋಜನೆ ಮತ್ತು ಪಶುಭಾಗ್ಯ ಯೋಜನೆಗಳನ್ನು ಜಾರಿಗೊಳಿಸುವುದು.
  5. ಪ್ರತಿ 5 ವರ್ಷಗಳಿಗೊಮ್ಮೆ ಜಾನುವಾರು ಗಣತಿಯನ್ನು ನಡೆಸುವುದು ಮತ್ತು ಪ್ರಮುಖ ಪ್ರಾಣಿ ಜನ್ಯ ಉತ್ಪಾದನೆಗಳಾದ ಹಾಲು, ಮಾಂಸ ಉಣ್ಣೆ, ಮತ್ತು ಮೊಟ್ಟೆ ಮುಂತಾದವುಗಳ ಅಂದಾಜು ಮಾಡುವುದಕ್ಕಾಗಿ ವರ್ಷವಿಡಿ ಸಮಗ್ರ ಮಾದರಿ ಸಮೀಕ್ಷೆಯನ್ನು ನಡೆಸುವುದು.
  6. ಕುಕ್ಕುಟ ಅಭಿವೃದ್ದಿ.
  7. ಜಾನುವಾರು ರೋಗಗಳ ತಹಬಂದಿಗಾಗಿ ರಾಜ್ಯಗಳಿಗೆ ನೆರವು ಯೋಜನೆ (ಆಸ್ಕಾಡ್) ಅನುಷ್ಠಾನ
  8. ಜಿಲ್ಲೆಯ ರೈತರ ಮಿಶ್ರತಳಿ ರಾಸುಗಳು, ಎತ್ತುಗಳು ಹಾಗೂ ಎಮ್ಮೆಗಳಿಗೆ ಸಹಾಯಧನ ನೀಡಿ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ.